ನೀ ತಂದೆ ನಾ ಕಂದ ,
ಇದು ನಮ್ಮ ಅನುಬಂಧ
ಬೇರೇನು ನಾ ಅರಿಯೆನು
ನಿನ್ನಾಣೆ ನಿಜವನ್ನೆ ನಾ ನುಡಿವೆನು |
|| ಪ ||
ನೀ ತಂದೆ ನಾ ಬಂದೆ ನಡೆಸಿದಂತೇ ನಡೆದೆ
ಕಲಿಸಿದ ಮಾತು ಕಲಿತೆ
ಗುರುರಾಯ ಇನ್ನೇಕೆ ನನಗೆ ಚಿಂತೆ |
|| ನೀ ತಂದೆ ||
ಎಡವಿದರು ನೀನಿರುವೆ, ತೊದಲಿದರು ನೀನಿರುವೆ
ನಿನ್ನದೆ ಎಲ್ಲ ಎನುವೆ
ಗುರುರಾಯ ನನ್ನದೇನಿಲ್ಲ ಎನುವೆ ||
ನಗಿಸಿದರೆ ನಾ ನಗುವೆ, ಅಳಿಸಿದರೆ ನಾ ಅಳುವೆ
ಕಾರಣ ನಾ ಕೇಳೆನು |
ಗುರುರಾಯ ಬಲ್ಲೆ ನೀನೆಲ್ಲವನ್ನು ||
ನೋವಿನಲೆ ಮುಳುಗಿರಲಿ, ಕಣ್ಣೀರು ಕಲೆತಿರಲಿ
ಕಾಪಾಡು ಬಾ ಎನ್ನೆನು
ಕಂದನ ತಂದೆಯು ಮರೆವನೇನು |
|| ನೀ ತಂದೆ ||
ಬಿಸಿಲಲ್ಲಿ ನೆರಳಲ್ಲಿ , ಹಗಲಲ್ಲಿ ಇರುಳಲ್ಲಿ
ಗುರುರಾಘವೇಂದ್ರ ಎನುವೆ
ಆ ಕ್ಷಣವೆ ಆನಂದವಾ ಹೊಂದುವೆ ||
ಎಲ್ಲಿರಲಿ ಹೇಗಿರಲಿ ದೂರದಲೆ ನಾನಿರಲಿ
ಭಯವನ್ನೆ ನಾ ಕಾಣೆನು |
ಗುರುರಾಯ ರಕ್ಷಣೆಗೆ ಇರಲು ನೀನು ||
ನೀ ಬಂದು ನಿಂತರೂ ವರವ ಕೇಳೆಂದರು
ಏನೊಂದನೂ ಬೇಡೆನು
ಗುರುರಾಯ ಕೊಡುವೆ ನೀನೆಲ್ಲವನ್ನು ||
ಹೂವಿನಾ ಹೃದಯದಲಿ ಪರಿಮಳವು ಬೆರೆತಂತೆ
ನನ್ನೆದೆಯ ಗುಡಿಯಲ್ಲಿಯೆ |
ನೀನಿರಲು ಚಿಂತೆಯ ಮಾತೆಲ್ಲಿದೆ ||
ನೀ ತಂದೆ ನಾ ಕಂದ,ಇದು ನಮ್ಮ ಅನುಬಂಧ
ಬೇರೆನು ನಾ ಅರಿಯೆನು | ಗುರುರಾಯ ನಿಜವನ್ನೆ ನಾ ನುಡಿವೆನು |
ಬೇರೇನು ನಾ ಅರಿಯೆನು
ನಿನ್ನಾಣೆ ನಿಜವನ್ನೆ ನಾ ನುಡಿವೆನು |
**