ಗುಬ್ಬಿಯಾಳೋ ಗುಬ್ಬಿಯಾಳೋ
ಗೋವಿಂದ ಗೋವಿಂದ ಗುಬ್ಬಿಯಾಳೋ ||
ಗೋವಿಂದ ಗೋವಿಂದನೆಂದು ನೆನೆಯಿರೊ
ಗುಬ್ಬಿಯಾಳೋ ಗುಬ್ಬಿಯಾಳೋ ||
||ಗುಬ್ಬಿಯಾಳೋ||
ಕೇಶವನ ನೆನೆದರೆ
ಕ್ಲೇಶ ಪರಿಹಾರವೊ ಗುಬ್ಬಿಯಾಳೋ |
ನಾರಾಯಣನ ಧ್ಯಾನದಿಂದ
ನರಕಭಯವಿಲ್ಲವೊ ಗುಬ್ಬಿಯಾಳೋ |
ಮಾಧವನ ನೆನೆದರೆ
ಮನೋಭಿಷ್ಟ ಕೊಡುವನೊ ಗುಬ್ಬಿಯಾಳೋ |
ಗೋವಿಂದನ ದಯದಿಂದ
ಘೋರ ದುರಿತ ನಾಶನವು ಗುಬ್ಬಿಯಾಳೋ |
||ಗುಬ್ಬಿಯಾಳೋ||
ವಿಷ್ಣು ಭಜನೆ ಇಲ್ಲದವಗೆ
ವೈಷ್ಣವರ ಜನ್ಮ ಉಂಟೆ ಗುಬ್ಬಿಯಾಳೋ |
ಮಧುಸೂದನನ ಧ್ಯಾನದಿಂದ
ಅತಿಶಯವು ಇಹುದೋ ಗುಬ್ಬಿಯಾಳೋ |
ತ್ರಿವಿಕ್ರಮನ ನೆನೆದರೆ
ಸಾವಿತ್ರಿಯಾಗಿಹರೊ ಗುಬ್ಬಿಯಾಳೋ |
ವಾಮನ ದೇವರು ನಮಗೆ
ವರಗಳ ಕೊಡುವರು ಗುಬ್ಬಿಯಾಳೋ |
||ಗುಬ್ಬಿಯಾಳೋ||
ಶ್ರೀಧರನ ನೆನೆದರೆ
ಸಿರಿ ನಮಗೆ ಒಲಿವಳು ಗುಬ್ಬಿಯಾಳೋ |
ಹೃಷಿಕೇಶನ ಧ್ಯಾನದಿಂದ
ಹೃದಯ ಪರಿಶುದ್ಧವೋ ಗುಬ್ಬಿಯಾಳೋ |
ಪದ್ಮನಾಭ ನಮ್ಮೆಲ್ಲರ
ಪಾಲಿಸಿ ರಕ್ಷಿಪನೋ ಗುಬ್ಬಿಯಾಳೋ |
ದಾಮೋದರನ ನೆನೆದರೆ
ಪಾಮರತ್ವ ಬಿಡಿಸುವನೋ ಗುಬ್ಬಿಯಾಳೋ |
||ಗುಬ್ಬಿಯಾಳೋ||
ಸಂಕರ್ಷಣನ ಧ್ಯಾನದಿಂದ
ಸಂತಾನ ಅಭಿವೃದ್ಧಿಯು ಗುಬ್ಬಿಯಾಳೋ |
ವಾಸುದೇವನ ದಯದಿಂದ
ವಂಶ ಉಧ್ಧಾರವು ಗುಬ್ಬಿಯಾಳೋ |
ಪ್ರದ್ಯುಮ್ನನ ನೆನೆದರೆ
ಭೂಪ್ರದಕ್ಷಿಣೆ ಫಲವು ಗುಬ್ಬಿಯಾಳೋ |
ಅನಿರುಧ್ಧನ ಸೇವಿಸೆ
ಪುನೀತರಾಗಿಹೆವು ಗುಬ್ಬಿಯಾಳೋ |
||ಗುಬ್ಬಿಯಾಳೋ||
ಪುರುಷೋತ್ತಮ ಪುರಾಣ
ಪುರುಷನೆಂದು ತಿಳಿಯಿರೊ ಗುಬ್ಬಿಯಾಳೋ |
ಅಧೋಕ್ಷಜ ನಮ್ಮೆಲ್ಲರ
ಆಧಾರವಾಗಿಹನೋ ಗುಬ್ಬಿಯಾಳೋ |
ನಾರಸಿಂಹ ದೇವರು
ನಮ್ಮ ಕುಲದೈವವೋ ಗುಬ್ಬಿಯಾಳೋ |
ಅಚ್ಯುತ ಲಕ್ಷ್ಮಿಯ ಕೂಡಿ
ಸಚ್ಚಿದಾನಂದನು ಗುಬ್ಬಿಯಾಳೋ |
||ಗುಬ್ಬಿಯಾಳೋ||
ಜನಾರ್ಧನ ದೇವರು
ಜಗಕ್ಕೆಲ್ಲ ಶ್ರೇಷ್ಠರು ಗುಬ್ಬಿಯಾಳೋ |
ಉಪೇಂದ್ರನು ನಮ್ಮಪರಾಧವ
ಕ್ಷಮಿಸುವ ಗುಬ್ಬಿಯಾಳೋ |
ಹರಿನಾಮಾಮೃತಕೆ ಸರಿ
ಧರೆಯೊಳಗೆ ಇಲ್ಲವೋ ಗುಬ್ಬಿಯಾಳೋ |
ಶ್ರೀಕೃಷ್ಣ ರಂಗೇಶಯೆಂಬೊ
ಸಿಧ್ಧಕ್ರಿಯ ಬಲ್ಲರೇ ಗುಬ್ಬಿಯಾಳೋ |
||ಗುಬ್ಬಿಯಾಳೋ||
ಈ ಗುಬ್ಬಿ ಪಾಡುವರಿಗೆ
ಇಹಪರ ಸಂತತವು ಗುಬ್ಬಿಯಾಳೋ |
ಧರಣಿಯೊಳು ಅಚಂದ್ರಾರ್ಕ
ತಾರಕವಾಗಿಹರು ಗುಬ್ಬಿಯಾಳೋ |
ಹಯವದನನ ಪಾದ ಧ್ಯಾನ
ಮರೆಯದೆ ನೆನೆ ಮನವೆ |
ನಮ್ಮ ಹಯವದನನ ಪಾದವೆ
ನೆನೆ ಮನವೆ ಗುಬ್ಬಿಯಾಳೋ
||ಗುಬ್ಬಿಯಾಳೋ||
***