ಗುಬ್ಬಿಯಾಳೋ ಗುಬ್ಬಿಯಾಳೋ

ಗೋವಿಂದ ಗೋವಿಂದ ಗುಬ್ಬಿಯಾಳೋ ||

ಗೋವಿಂದ ಗೋವಿಂದನೆಂದು ನೆನೆಯಿರೊ

ಗುಬ್ಬಿಯಾಳೋ ಗುಬ್ಬಿಯಾಳೋ  ||

||ಗುಬ್ಬಿಯಾಳೋ||

ಕೇಶವನ ನೆನೆದರೆ 

ಕ್ಲೇಶ ಪರಿಹಾರವೊ ಗುಬ್ಬಿಯಾಳೋ  |

ನಾರಾಯಣನ ಧ್ಯಾನದಿಂದ 

ನರಕಭಯವಿಲ್ಲವೊ ಗುಬ್ಬಿಯಾಳೋ |

ಮಾಧವನ ನೆನೆದರೆ 

ಮನೋಭಿಷ್ಟ ಕೊಡುವನೊ ಗುಬ್ಬಿಯಾಳೋ |

ಗೋವಿಂದನ ದಯದಿಂದ 

ಘೋರ ದುರಿತ ನಾಶನವು ಗುಬ್ಬಿಯಾಳೋ |

||ಗುಬ್ಬಿಯಾಳೋ||

ವಿಷ್ಣು ಭಜನೆ ಇಲ್ಲದವಗೆ 

ವೈಷ್ಣವರ ಜನ್ಮ ಉಂಟೆ ಗುಬ್ಬಿಯಾಳೋ |

ಮಧುಸೂದನನ ಧ್ಯಾನದಿಂದ 

ಅತಿಶಯವು ಇಹುದೋ ಗುಬ್ಬಿಯಾಳೋ |

ತ್ರಿವಿಕ್ರಮನ ನೆನೆದರೆ 

ಸಾವಿತ್ರಿಯಾಗಿಹರೊ ಗುಬ್ಬಿಯಾಳೋ |

ವಾಮನ ದೇವರು ನಮಗೆ 

ವರಗಳ ಕೊಡುವರು ಗುಬ್ಬಿಯಾಳೋ |

 ||ಗುಬ್ಬಿಯಾಳೋ||

ಶ್ರೀಧರನ ನೆನೆದರೆ 

ಸಿರಿ ನಮಗೆ ಒಲಿವಳು ಗುಬ್ಬಿಯಾಳೋ |

ಹೃಷಿಕೇಶನ ಧ್ಯಾನದಿಂದ 

ಹೃದಯ ಪರಿಶುದ್ಧವೋ ಗುಬ್ಬಿಯಾಳೋ |

ಪದ್ಮನಾಭ ನಮ್ಮೆಲ್ಲರ 

ಪಾಲಿಸಿ ರಕ್ಷಿಪನೋ ಗುಬ್ಬಿಯಾಳೋ |

ದಾಮೋದರನ ನೆನೆದರೆ 

ಪಾಮರತ್ವ ಬಿಡಿಸುವನೋ ಗುಬ್ಬಿಯಾಳೋ |

||ಗುಬ್ಬಿಯಾಳೋ||

ಸಂಕರ್ಷಣನ ಧ್ಯಾನದಿಂದ 

ಸಂತಾನ ಅಭಿವೃದ್ಧಿಯು ಗುಬ್ಬಿಯಾಳೋ |

ವಾಸುದೇವನ ದಯದಿಂದ

ವಂಶ ಉಧ್ಧಾರವು ಗುಬ್ಬಿಯಾಳೋ |

ಪ್ರದ್ಯುಮ್ನನ ನೆನೆದರೆ 

ಭೂಪ್ರದಕ್ಷಿಣೆ  ಫಲವು ಗುಬ್ಬಿಯಾಳೋ |

ಅನಿರುಧ್ಧನ ಸೇವಿಸೆ 

ಪುನೀತರಾಗಿಹೆವು ಗುಬ್ಬಿಯಾಳೋ |

||ಗುಬ್ಬಿಯಾಳೋ||

ಪುರುಷೋತ್ತಮ ಪುರಾಣ 

ಪುರುಷನೆಂದು ತಿಳಿಯಿರೊ ಗುಬ್ಬಿಯಾಳೋ |

ಅಧೋಕ್ಷಜ ನಮ್ಮೆಲ್ಲರ 

ಆಧಾರವಾಗಿಹನೋ ಗುಬ್ಬಿಯಾಳೋ |

ನಾರಸಿಂಹ ದೇವರು 

ನಮ್ಮ ಕುಲದೈವವೋ ಗುಬ್ಬಿಯಾಳೋ |

ಅಚ್ಯುತ ಲಕ್ಷ್ಮಿಯ ಕೂಡಿ 

ಸಚ್ಚಿದಾನಂದನು ಗುಬ್ಬಿಯಾಳೋ |

||ಗುಬ್ಬಿಯಾಳೋ||

ಜನಾರ್ಧನ ದೇವರು 

ಜಗಕ್ಕೆಲ್ಲ ಶ್ರೇಷ್ಠರು ಗುಬ್ಬಿಯಾಳೋ |

ಉಪೇಂದ್ರನು ನಮ್ಮಪರಾಧವ 

ಕ್ಷಮಿಸುವ ಗುಬ್ಬಿಯಾಳೋ |

ಹರಿನಾಮಾಮೃತಕೆ ಸರಿ 

ಧರೆಯೊಳಗೆ ಇಲ್ಲವೋ ಗುಬ್ಬಿಯಾಳೋ |

ಶ್ರೀಕೃಷ್ಣ ರಂಗೇಶಯೆಂಬೊ 

ಸಿಧ್ಧಕ್ರಿಯ ಬಲ್ಲರೇ ಗುಬ್ಬಿಯಾಳೋ |

                                 ||ಗುಬ್ಬಿಯಾಳೋ||

ಈ ಗುಬ್ಬಿ ಪಾಡುವರಿಗೆ 

ಇಹಪರ ಸಂತತವು ಗುಬ್ಬಿಯಾಳೋ |

ಧರಣಿಯೊಳು ಅಚಂದ್ರಾರ್ಕ  

ತಾರಕವಾಗಿಹರು ಗುಬ್ಬಿಯಾಳೋ |

ಹಯವದನನ ಪಾದ ಧ್ಯಾನ 

ಮರೆಯದೆ ನೆನೆ ಮನವೆ |

ನಮ್ಮ ಹಯವದನನ ಪಾದವೆ 

ನೆನೆ ಮನವೆ ಗುಬ್ಬಿಯಾಳೋ

                           ||ಗುಬ್ಬಿಯಾಳೋ||

***