ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು |

ದೋಷರಾಶಿ ನಾಶ ಮಾಡೋ ಶ್ರೀಶ ಕೇಶವ |

|| ಪ ||

ಶರಣು ಹೊಕ್ಕೆನಯ್ಯ ಎನ್ನ 

ಮರಣ ಸಮಯದಲ್ಲಿ ನಿನ್ನ 

ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ |

ಶೋಧಿಸೆನ್ನ ಭವದ ಕಲುಷ 

ಭೋಧಿಸಯ್ಯ ಜ್ಞಾನವೆನಗೆ 

ಬಾಧಿಸುವ ಯಮನ ಬಾಧೆ  ಬಿಡಿಸು ಮಾಧವ |

ಹಿಂದನೇಕ ಯೋನಿಗಳಲಿ 

ಬಂದು ಬಂದು ನೊಂದೆ ನಾನು

ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ |

|| ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು ||

 ಭ್ರಷ್ಟನೆನಿಸಬೇಡ ಕೃಷ್ಣಾ 

ಇಷ್ಟು ಮಾತ್ರ ಬೇಡಿಕೊಂಬೆ

ಶಿಷ್ಟರೊಡನೆ ಇಟ್ಟು ಕಷ್ಟ  ಬಿಡಿಸು ವಿಷ್ಣುವೇ |

ಮದನನಯ್ಯ ನಿನ್ನ ಮಹಿಮೆ 

ವದನದಿಂದ  ನುಡಿಯುವಂತೆ

ಹೃದಯದಲ್ಲಿ ಹುದುಗಿಸಯ್ಯ ಮಧುಸೂದನ |

ಕವಿದುಕೊಂಡು ಇರುವ ಪಾಪ 

ಸವೆದು ಪೋಗುವಂತೆ ಮಾಡು 

ಜವನ ಬಾಧೆಯನ್ನು ಬಿಡಿಸೋ  ಶ್ರೀತ್ರಿವಿಕ್ರಮ |

|| ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು||

ಕಾಮಜನಕ ನಿನ್ನ ನಾಮ 

 ಪ್ರೇಮದಿಂದ ಪಾಡುವಂಥ 

ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ |

ಮೊದಲು ನಿನ್ನ ಪಾದಪೂಜೆ

ಒದಗುವಂತೆ ಮಾಡೋ ಎನ್ನ 

ಹೃದಯದೊಳಗೆ ಸದನ ಮಾಡು ಮುದದಿ ಶ್ರೀಧರ |

ಹುಸಿಯನಾಡಿ ಹೊಟ್ಟೆ ಹೊರೆವ 

ವಿಷಯದಲ್ಲಿ ರಸಿಕನೆಂದೂ 

ಹುಸಿಗೆ ಹಾಕದಿರೋ ಎನ್ನ ಹೃಷೀಕೇಶನೇ |

|| ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು||

 ಕಾಮಕ್ರೋಧ ಬಿಡಿಸಿ ನಿನ್ನ 

ನಾಮ ಜಿಹ್ವೆಯೊಳಗೆ ನುಡಿಸೋ

ಶ್ರೀಮಹಾನುಭಾವನಾದ ದಾಮೋದರ |

ಬಿದ್ದು ಭವದನೇಕ ಜನುಮ 

ಬದ್ದನಾಗಿ ಕಲುಷದಿಂದ 

ಗೆದ್ದು ಪೋಪ ಬುಧ್ಧಿ ತೋರೊ ಪದ್ಮನಾಭನೇ |

ಪಂಕಜಾಕ್ಷ ನೀನು ಎನ್ನ 

ಮಂಕಬುದ್ಧಿಯನ್ನು ಬಿಡಿಸಿ 

ಕಿಂಕರನ್ನ ಮಾಡಿಕೊಳ್ಳೋ ಸಂಕರ್ಷಣ |

|| ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು ||

ಏಸು ಜನ್ಮ ಬಂದರೇನು 

ದಾಸನಲ್ಲವೇನು ನಾನು 

ಘಾಸಿ ಮಾಡದಿರು ಇನ್ನು ವಾಸುದೇವನೇ |

ಬುದ್ಧಿ ಶೂನ್ಯನಾಗಿ ಎನ್ನ 

ಬದ್ಧಕಾಯ ಕುಹಕ ಮನವ 

ತಿದ್ದಿ ಹೃದಯ ಶುದ್ಧ ಮಾಡೋ ಪ್ರದ್ಯುಮ್ನನೇ |

ಜನನಿ ಜನಕ ನೀನೇ ಎಂದು 

ನೆನೆವೆನಯ್ಯ ದೀನಬಂಧು

 ಎನಗೆ ಮುಕ್ತಿ ಪಾಲಿಸಿನ್ನು ಅನಿರುದ್ಧನೇ |

|| ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು ||

ಹರುಷದಿಂದ ನಿನ್ನ ನಾಮ

ಸ್ಮರಿಸುವಂತೆ ಮಾಡು ಕ್ಷೇಮ

ಇರಿಸು ಚರಣದಲ್ಲಿ ಪ್ರೇಮ ಪುರುಷೋತ್ತಮ |

ಸಾಧುಸಂಗ ಕೊಟ್ಟು ನಿನ್ನ 

ಪಾದಭಜನೆ ಇತ್ತು ಎನ್ನ 

ಭೇದಮಾಡಿ ನೋಡದಿರೊ ಹೇ ಅಧೋಕ್ಷಜ |

 ಚಾರುಚರಣ ತೋರಿ ಎನಗೆ 

ಪಾರುಗಾಣಿಸಯ್ಯ ಕೊನೆಗೆ 

ಭಾರ ಹಾಕಿರುವೆ ನಿನಗೆ ನಾರಸಿಂಹನೇ |

ಸಂಚಿತಾದಿ ಪಾಪಗಳು 

ಕಿಂಚಿತಾದ ಪೀಡೆಗಳು 

ಮುಂಚಿತಾಗಿ ಕಳೆಯಬೇಕೋ ಸ್ವಾಮಿ ಅಚ್ಯುತ |

|| ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು ||

ಜ್ಞಾನ ಭಕುತಿ ಕೊಟ್ಟು ನಿನ್ನ 

ಧ್ಯಾನದಲ್ಲಿ ಇಟ್ಟು ಸದಾ 

ಹೀನ ಬುದ್ಧಿ ಬಿಡಿಸೊ ಮುನ್ನ ಶ್ರೀ ಜನಾರ್ಧನ |

ಜಪತಪಾನುಷ್ಠಾನವಿಲ್ಲ 

ಕುಪಥಗಾಮಿಯಾದ ಎನ್ನ

ಕೃಪೆಯ ಮಾಡಿ ಕ್ಷಮಿಸಬೇಕು ಹೇ ಉಪೇಂದ್ರನೇ |

ಮೊರೆಯ ಇಡುವೆನಯ್ಯ ನಿನಗೆ 

ಶರಧಿಶಯನ ಶುಭಮತಿಯ

ಇರಿಸೋ ಭಕ್ತರೊಳು ಪರಮಪುರುಷ ಶ್ರೀಹರೇ |

|| ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು   ||

ಪುಟ್ಟಿಸಲೇಬೇಡ ಇನ್ನು 

ಪುಟ್ಟಿಸಿದಕೆ ಪಾಲಿಸಿನ್ನು  ||

ಇಷ್ಟು ಮಾತ್ರ ಬೇಡಿಕೊಂಬೆ ಶ್ರೀ ಕೃಷ್ಣನೇ |

ಸತ್ಯವಾದ ನಾಮಗಳನು

 ನಿತ್ಯದಲ್ಲಿ ಪಠಿಸುವರಿಗೆ 

ಅರ್ಥಿಯಿಂದ ಸಲಹುತಿರುವ ಕರ್ತೃ ಕೇಶವ |

ಮರೆಯದೆಲೆ ಹರಿಯ ನಾಮ 

ಬರೆದು ಓದಿ ಪೇಳುವರಿಗೆ

ಕರೆದು ಮುಕ್ತಿ ಕೊಡುವ ನೆಲೆಯಾದಿಕೇಶವ |

|| ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು||

***